Saturday 5 December 2015

ಬೆಂಗಳೂರಿನ ಬಾಲಸಂಗಮ

ಅಂದು ಒಂದು ಮಹಾಸಂಗಮವಾಗಿತ್ತು. ಬಾಲಸಂಗಮವೆನಿಸಿಕೊಂಡಿತ್ತು. ಭಾನುವಾರ, 29, Nov, ಕಾರ್ತಿಕ ಕೃಷ್ಣ ಚತುರ್ಥಿಯಂದು, ಕಸವನಹಳ್ಳಿಯ ಅಮೃತಾ ಸ್ಕೂಲ್ ಆಫ್ ಇಂಜಿನಿಯರಿಂಗ್ನಲ್ಲಿ ಬೆಂಗಳೂರಿನ ನಾನಾ ಕಡೆಯಿಂದ ಸುಮಾರು ೨೭೦ ಕುಟುಂಬದವರು, ತಮ್ಮ ೩೨೫ ಮಕ್ಕಳೊಂದಿಗೆ ಈ ಮಹಾಸಂಗಮಕ್ಕೆ ಆಗಮಿಸಿದ್ದರು. ಬೆಳಿಗ್ಗೆ ೮:೩೦ ರಿಂದ ಶುರುವಾದ ಕಾರ್ಯಕ್ರಮ ಸಂಜೆ ಸುಮಾರು ೫ ರವರೆಗೆ ಮಕ್ಕಳ ನಾನಾ ಚಟುವಟಿಕೆಗಳಿಂದ ದಿನ ಬೆಳಗಿಸಿತ್ತು. 

ಯಾರೀ ಮಕ್ಕಳು ಮತ್ತು ಕುಟುಂಬದವರು?
ಬೆಂಗಳೂರಿನ IT ಮಿಲನದ ಕಾರ್ಯಕರ್ತರು ಕಳೆದ ಸುಮಾರು ೫ ವರುಷಗಳಿಂದ ಅವರವರ ಮನೆ ಸುತ್ತ ಮುತ್ತ, ಅಪಾರ್ಟ್ ಮೆಂಟ್ ಗಳಲ್ಲಿ ಪ್ರತಿ ಭಾನುವಾರ ೧ ರಿಂದ ೧:೩೦ ಘಂಟೆಯ ‘ಬಾಲಭಾರತಿ’ ನಡೆಸಿಕೊಂಡು ಬಂದಿದ್ದಾರೆ. ಅದು ೫ ರಿಂದ ೧೧ ರವರೆಗಿನ ಎಳೆಯ ಬಾಲಕ ಬಾಲಕಿಯರಲ್ಲಿ ಸರಳ ಭಾರತಿಯ ಸಂಸ್ಕೃತಿ ಬೆಳೆಸುವ ಒಂದು ಅಭಿಯಾನ. ಅದಕ್ಕೆ ಶಿಕ್ಷಕರು ಅಲ್ಲಿಯ ಆಸಕ್ತ ತಂದೆ ತಾಯಂದಿರೆ. ಸುಮಾರು ೬೫ ಬಾಲಭಾರತಿಗಳು ಬೆಂಗಳೂರಿನ ನಾನಾ ಕಡೆ ನಡೆಯುತ್ತಿದೆ. ಅವರಿಗೆ ನೆರವಾಗಲು ಮತ್ತು ಒಂದು ಸಮನಾದ ರೀತಿಯಲ್ಲಿ ನಡೆಯಲು ಮಾಸಪತ್ರಿಕೆ, ಒಂದು ಜಾಲತಾಣ ಎಲ್ಲವೂ IT ಮಿಲನದ ಸ್ವಯಂಸೇವಕರಿಂದಲೇ ತಯಾರಾಗಿ ಅವ್ಯಾಹತವಾಗಿ ನಡೆಯುತ್ತಿದೆ. ಈ ವರುಷವು ಎಲ್ಲಾ ಬಾಲಭಾರತಿಯವರೂ ಒಂದು ಕಡೆ ಸೇರಿ ಒಂದು ದೊಡ್ಡ ರೀತಿಯ ಯಜ್ಞ ಮಾಡುವ ಮಹದಾಸೆ ವ್ಯಕ್ತಪಡಿಸಿದರು. ಹಾಗೆ ಪ್ರಾರಂಭವಾದ ಒಂದು ಎಳೆಯಾಸೆ ೩೫ ಬಾಲಭಾರತಿಗಳು ಒಂದುಗೂಡಿ ನಡೆಸಿದ ಈ ಕಾರ್ಯಕ್ರಮಕ್ಕೆ ‘ಬಾಲಸಂಗಮ’ ಎನ್ನಿಸಿತು.

ಹೇಗಿತ್ತು ಈ ಮಹಾಯಜ್ಞ?
ಮೊದಲಿಗೆ ಎಲ್ಲಾ ಮಕ್ಕಳಿಂದ ಒಕ್ಕೊರಲಿನಿಂದ ಸುಂದರವಾಗಿ ರಾಗದಿಂದ ಏಕಾತ್ಮಥ ಸ್ತೋತ್ರ ಪಠಣ. ನಂತರದಲ್ಲಿ ಪ್ರತಿಯೊಂದು ಬಾಲಭಾರತಿಯವರು ತಮ್ಮ ಆಯ್ದ ಒಂದು ರಾಷ್ಟ್ರೀಯ ಹಬ್ಬದ ಕಲಾತ್ಮಕ ಪ್ರದರ್ಶನ ಅಲ್ಲಿಯೇ ಸ್ಥಳದಲ್ಲಿ ನಾನಾ ವಸ್ತುಗಳಿಂದ ಮಾಡಿ ತೋರಿಸಿದರು. ಈ ಸ್ಪರ್ಧೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ತಂದೆತಾಯಂದಿರು ಮತ್ತು ಅಜ್ಜಿ ಅಜ್ಜಂದಿರು ಪಾಲ್ಗೊಂಡು ಒಂದು ನಿಜವಾದ ಊರ ಹಬ್ಬದ ವಾತಾವರಣ ನಿರ್ಮಿಸಿದರು. ಈ ಸ್ಪರ್ಧೆಯಲ್ಲಿ ೫ ಕೇಂದ್ರದವರಿಗೆ ಪ್ರಶಸ್ತಿ ಸಿಕ್ಕಿತು. ಯುಗಾದಿ, ಸಂಕ್ರಾಂತಿ, ದಸರಾ, ದೀಪಾವಳಿ ಮತ್ತು ಸ್ವತಂತ್ರ ದಿನ ಇವುಗಳಲ್ಲಿ ಯಾವುದಾದರೂ ಒಂದನ್ನು ಒಂದೊಂದು ಕೇಂದ್ರದವರು ಆರಿಸಿಕೊಂಡು ಮಾಡಿದರು.

ನಂತರ ನಡೆದ ಕಾರ್ಯಕ್ರಮಗಳು, ತಂದೆತಾಯಂದಿರಿಗೆ ಬೇರೆಯ ಬೌಧಿಕ ಕಾರ್ಯಕ್ರಮ ಮತ್ತು ಮಕ್ಕಳಿಗೆ ಬೇರೆಯ ಸ್ಪರ್ಧೆಗಳು ನಡೆಯಿತು. ಮಕ್ಕಳಿಗೆ ದೇಶಭಕ್ತಿ ಗೀತೆಯ ಸ್ಪರ್ಧೆ ಮತ್ತು ಪ್ರಶ್ನೋತ್ತರ ಸ್ಪರ್ಧೆ ನಡೆಯಿತು. ಗೆದ್ದ ಕೇಂದ್ರಗಳಿಗೆ ಸೂಕ್ತ ಬಹುಮಾನಗಳು ವಿತರಣೆ ಆಯಿತು.     

ಕಾರ್ಯಕ್ರಮದ ಮೇರು ಮೆರಗು ಎನಿಸಿಕೊಂಡದ್ದು ಮಕ್ಕಳು ಏಕಾತ್ಮಥ ಸ್ತೋತ್ರದ ಪಾತ್ರಗಳನ್ನು ಅನುಕರಿಸಿ ಉಡುಗೆ ತೊಡುಗೆಗಳನ್ನು ತೊಟ್ಟು ಸ್ತೋತ್ರದ ಹಿನ್ನೆಲಿಯಲ್ಲಿ ವೇದಿಕೆಯ ಮೇಲೆ ಸಾಲಿನಲ್ಲಿ ನಡೆದು ಪ್ರದರ್ಶನ ನಡೆಸಿದ್ದು. ಭಾರತದ ಮಹರ್ಷಿಗಳು, ರಾಜರ್ಷಿಗಳು, ಮಹಾಮಹಿಮರು, ಭಾರತ ನಿರ್ಮಾಣಕಾರರೆಲ್ಲ ನಮ್ಮೊಂದಿಗೆ ಇರಲು ಬಂದ೦ತೆ ಇತ್ತು. ದೇವತೆಗಳು ಅದಕ್ಕೆ ಸರಿಯಾಗಿ ತಮ್ಮ ಆಶೀರ್ವಾದ ಇದಕ್ಕೆ ಇದೆ ಎಂಬ೦ತೆ ತುಂತುರು ಹನಿ ಹಾಕಿ ಪುಷ್ಪವೃಷ್ಟಿ ಎಸಗಿದರು. ನಮ್ಮ ಸ್ವಯಂಸೇವಕರು ಸಮಯ ಪ್ರಜ್ಞೆಇಂದ ಅದರಿಂದ ಕಾರ್ಯಕ್ರಮಕ್ಕೆ ಧಕ್ಕೆ ಆಗದಂತೆ ನಡೆದುಕೊಂಡರು.


ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು, ಮಾನನೀಯ. ಮುಕುಂದ, ಅ.ಭಾ.ಸಹ ಬೌಧಿಕ ಪ್ರಮುಖರು, ಮಾನನೀಯ. ಸು. ರಾಮಣ್ಣ, ಅ.ಭಾ.ಕುಟುಂಬ ಪ್ರಬೋಧನ ಪ್ರಮುಖರು, ಇವರುಗಳು ಇದ್ದರು.  ಮಾನನೀಯ ಶ್ರೀ ಧನರಾಜ್ ಸ್ವಾಮೀಜಿ, ವಿದ್ಯಾಕೇಂದ್ರದ ಪ್ರಮುಖರು ಕಾರ್ಯಕ್ರಮದ ಆರಂಭ ಮತ್ತು ಕೊನೆಗೆ ಇದ್ದು ಮಾರ್ಗದರ್ಶನ ನೀಡಿದರು.